ದಾವೀದನ ರಾಜ್ಯಸಂತಾನಗಳನ್ನು ಶಾಶ್ವತವಾಗಿರಿಸುವೆನೆಂದು ಯೆಹೋವನು ವಾಗ್ದಾನಮಾಡಿದ್ದು
1 ಯೆಹೋವನ ಅನುಗ್ರಹದಿಂದ ಸುತ್ತಣ ವೈರಿಗಳ ಭಯವೆಲ್ಲಾ ತಪ್ಪಿಹೋಗಿ ಅರಸನು ಅರಮನೆಯಲ್ಲಿ ಸಮಾಧಾನದಿಂದ ವಾಸಿಸುತ್ತಿದ್ದಾಗ
2 ಒಂದು ದಿವಸ ಪ್ರವಾದಿಯಾದ ನಾತಾನನಿಗೆ – ನೋಡು, ನಾನು ದೇವದಾರುಮರದ ಮನೆಯಲ್ಲಿ ವಾಸವಾಗಿದ್ದೇನೆ; ದೇವರ ಮಂಜೂಷವಾದರೋ ಬಟ್ಟೆಯ ಮನೆಯಲ್ಲಿ ಇರುತ್ತದೆ ಎಂದು ಹೇಳಿದನು.
3 ನಾತಾನನು ಅರಸನಿಗೆ – ಆಗಲಿ ಮನಸ್ಸಿದ್ದಂತೆ ಮಾಡು, ಯೆಹೋವನು ನಿನ್ನ ಸಂಗಡ ಇರುತ್ತಾನೆ ಅಂದನು.
4 ಅದೇ ರಾತ್ರಿಯಲ್ಲಿ ಯೆಹೋವನು ನಾತಾನನಿಗೆ ಆಜ್ಞಾಪಿಸಿದ್ದೇನಂದರೆ –
5 ಹೋಗಿ ನನ್ನ ಸೇವಕನಾದ ದಾವೀದನಿಗೆ – ನೀನು ನನಗೋಸ್ಕರ ಮನೆಯನ್ನು ಕಟ್ಟಬೇಕೋ?
6 ನಾನು ಇಸ್ರಾಯೇಲ್ಯರನ್ನು ಐಗುಪ್ತ ದೇಶದಿಂದ ಬರಮಾಡಿದಂದಿನಿಂದ ಇಂದಿನವರೆಗೂ ಮನೆಯಲ್ಲಿ ವಾಸಮಾಡಲಿಲ್ಲ. ಗುಡಾರದಲ್ಲೇ ವಾಸಿಸುತ್ತಾ [ಅವರೊಡನೆ] ಸಂಚರಿಸಿದೆನು.
7 ನಾನು ಇಸ್ರಾಯೇಲ್ಯರ ಮಧ್ಯದಲ್ಲಿ ಸಂಚರಿಸುತ್ತಿದ್ದಾಗ ನನ್ನ ಜನರಾದ ಇಸ್ರಾಯೇಲ್ಯರನ್ನು ಪಾಲಿಸುವದಕ್ಕೋಸ್ಕರ ನನ್ನಿಂದ ನೇಮಿಸಲ್ಪಟ್ಟ ಯಾವ ಕುಲದವರನ್ನಾದರೂ – ನೀವು ನನಗೋಸ್ಕರ ದೇವದಾರುಮರದ ಮನೆಯನ್ನೇಕೆ ಕಟ್ಟಲಿಲ್ಲವೆಂದು ಕೇಳಿದೆನೋ ಎಂಬದಾಗಿ ಯೆಹೋವನು ಅನ್ನುತ್ತಾನೆ ಎಂದು ಹೇಳು.
8 ಇದಲ್ಲದೆ ನೀನು ನನ್ನ ಸೇವಕನಾದ ದಾವೀದನಿಗೆ ಹೇಳಬೇಕಾದದ್ದೇನಂದರೆ – ಸೇನಾಧೀಶ್ವರನಾದ ಯೆಹೋವನು ಹೀಗನ್ನುತ್ತಾನೆ – ಕುರಿಗಳ ಹಿಂದೆ ಹೋಗುತ್ತಿದ್ದ ನಿನ್ನನ್ನು ಅಡವಿಯಿಂದ ತೆಗೆದುಕೊಂಡು ನನ್ನ ಪ್ರಜೆಗಳಾದ ಇಸ್ರಾಯೇಲ್ಯರ ಮೇಲೆ ನಾಯಕನನ್ನಾಗಿ ನೇಮಿಸಿದೆನು.
9 ನೀನು ಹೋದಲ್ಲೆಲ್ಲಾ ನಿನ್ನ ಸಂಗಡ ಇದ್ದೆನು; ನಿನ್ನ ಶತ್ರುಗಳನ್ನೆಲ್ಲಾ ನಿನ್ನೆದುರಿನಲ್ಲಿಯೇ ಸಂಹರಿಸಿಬಿಟ್ಟೆನು. ಲೋಕದ ಮಹಾಪುರುಷರ ಹೆಸರಿನಂತೆ ನಿನ್ನ ಹೆಸರನ್ನೂ ದೊಡ್ಡದುಮಾಡುವೆನು.
10 ನನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೆ ಒಂದು ಸ್ಥಳವನ್ನು ಕೊಟ್ಟು ಅದರಲ್ಲಿ ಅವರನ್ನು ನೆಲೆಗೊಳಿಸುವೆನು. ಅವರು ಇನ್ನು ಮೇಲೆ ಯಾವ ಭಯವೂ ಇಲ್ಲದೆ ಅಲ್ಲಿ ವಾಸಿಸುವರು.
11 ಪೂರ್ವಕಾಲದಲ್ಲೂ ನಾನು ನನ್ನ ಜನರಾದ ಇಸ್ರಾಯೇಲ್ಯರ ಮೇಲೆ ನೇಮಿಸಿದ ನ್ಯಾಯಸ್ಥಾಪಕರ ಕಾಲದಿಂದೀಚೆಗೂ ದುಷ್ಟರು ಅವರನ್ನು ಕುಗ್ಗಿಸಿದಂತೆ ಇನ್ನು ಕುಗ್ಗಿಸುವದಿಲ್ಲ. ನೀನು ಶತ್ರು ಭಯವಿಲ್ಲದೆ ಸುಖದಿಂದಿರುವಂತೆ ಮಾಡುವೆನು. ಇದಲ್ಲದೆ ಯೆಹೋವನಾದ ನಾನು ನಿನಗೋಸ್ಕರ ಒಂದು ಮನೆಯನ್ನು ಕಟ್ಟುವೆನೆಂದು ಮಾತುಕೊಡುತ್ತೇನೆ.
12 ನಿನ್ನ ಆಯುಷ್ಕಾಲವು ಮುಗಿದು ನೀನು ಪಿತೃಗಳ ಬಳಿಗೆ ಸೇರಿದ ಮೇಲೆ ನಿನ್ನಿಂದ ಹುಟ್ಟುವವನನ್ನು ನೆಲೆಗೊಳಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು.
13 ಅವನು ನನ್ನ ಹೆಸರಿಗಾಗಿ ಒಂದು ಮನೆಯನ್ನು ಕಟ್ಟುವನು; ನಾನು ಅವನ ರಾಜ್ಯಸಿಂಹಾಸನವನ್ನು ನಿರಂತರವಾಗಿ ಸ್ಥಿರಪಡಿಸುವೆನು.
ದಾವೀದನ ಪ್ರಾರ್ಥನೆ
14 ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು; ಅವನು ತಪ್ಪುಮಾಡಿದರೆ ಅವನಿಗೆ ಮನುಷ್ಯಶಿಕ್ಷೆಯನ್ನು ಕೊಡುವೆನು, ನರಪುತ್ರರಂತೆ ಅವನನ್ನು ದಂಡಿಸುವೆನು.
15 ಆದರೂ ನನ್ನ ಕೃಪೆಯು ಸೌಲನನ್ನು ಬಿಟ್ಟುಹೊದ ಹಾಗೆ ಅವನನ್ನು ಬಿಟ್ಟುಹೋಗುವದಿಲ್ಲ. ನಾನು ಸೌಲನನ್ನು ನಿನ್ನೆದುರಿನಿಂದ ಹೊರಡಿಸಿಬಿಟ್ಟೆನಲ್ಲಾ!
16 ನಿನ್ನ ಮನೆಯೂ ಅರಸುತನವೂ ಸದಾಕಾಲ ಸ್ಥಿರವಾಗಿರುವವು; ನಿನ್ನ ಸಿಂಹಾಸನವು ಶಾಶ್ವತವಾಗಿರುವದು ಎಂಬದೇ.
17 ನಾತಾನನು ತನಗುಂಟಾದ ದರ್ಶನದ ಈ ಎಲ್ಲಾ ಮಾತುಗಳನ್ನು ದಾವೀದನಿಗೆ ಹೇಳಿದನು.
18 ಅನಂತರ ದಾವೀದನು ಹೋಗಿ ಯೆಹೋವನ ಸನ್ನಿಧಿಯಲ್ಲಿ ಕೂತುಕೊಂಡು – ಕರ್ತನೇ, ಯೆಹೋವನೇ, ನಾನೆಷ್ಟರವನು? ನನ್ನ ಮನೆ ಎಷ್ಟರದು? ನೀನು ನನ್ನನ್ನು ಇಲ್ಲಿಯವರೆಗೂ ತಂದಿದ್ದೀಯಲ್ಲಾ;
19 ಕರ್ತನೇ, ಯೆಹೋವನೇ, ಇದು ಸಾಲದೆಂದೆಣಿಸಿ ನಿನ್ನ ಸೇವಕನ ಬಹುದೂರಸಂತಾನದ ವಿಷಯದಲ್ಲಿಯೂ ವಾಗ್ದಾನಮಾಡಿದಿ. ಕರ್ತನೇ, ಯೆಹೋವನೇ, ನೀನು ನರಪ್ರಾಣಿಯನ್ನು ಹೀಗೆ ನಡಿಸಿದ್ದು ಆಶ್ಚರ್ಯ.
20 ಕರ್ತನೇ, ಯೆಹೋವನೇ, ನೀನು ನಿನ್ನ ಸೇವಕನಾದ ದಾವೀದನನ್ನು ಬಲ್ಲೆ; ನಾನು ಇನ್ನೇನು ಹೇಳಲಿ?
21 ನೀನು ನಿನ್ನ ವಾಗ್ದಾನಗಳನ್ನು ನೆರವೇರಿಸುವದಕ್ಕೋಸ್ಕರ ನಿನ್ನ ಇಷ್ಟಾನುಸಾರವಾಗಿ ಈ ಎಲ್ಲಾ ಮಹತ್ಕಾರ್ಯಗಳನ್ನು ನಡಿಸಿ ಅವುಗಳ ಅನುಭವವನ್ನು ನಿನ್ನ ಸೇವಕನಿಗೆ ಉಂಟುಮಾಡಿದ್ದೀ.
22 ದೇವರೇ, ಯೆಹೋವನೇ, ನೀನೇ ದೊಡ್ಡವನು; ನಿನ್ನ ಸಮಾನರು ಯಾರೂ ಇಲ್ಲ. ನಾವು ಕೇಳಿದವುಗಳನ್ನೆಲ್ಲಾ ಆಲೋಚಿಸಿ ನೋಡಿದರೆ ನಿನ್ನ ಹೊರತು ದೇವರೇ ಇಲ್ಲವೆಂಬದು ನಿಶ್ಚಯ.
23 ನಿನ್ನ ಇಸ್ರಾಯೇಲ್ ಪ್ರಜೆಗೆ ಸಮಾನವಾದ ಜನಾಂಗವು ಲೋಕದಲ್ಲಿ ಯಾವದಿರುತ್ತದೆ? ನೀನೇ ಹೋಗಿ ಅದನ್ನು ವಿಮೋಚಿಸಿ ಸ್ವಪ್ರಜೆಯನ್ನಾಗಿ ಮಾಡಿಕೊಂಡು ನಿನ್ನ ಹೆಸರನ್ನು ಪ್ರಸಿದ್ಧಪಡಿಸಿದಿ. ಐಗುಪ್ತ್ಯರು ಮೊದಲಾದ ಅನ್ಯಜನರ ಕೈಗೂ ಅವರ ದೇವತೆಗಳ ಕೈಗೂ ಸಿಕ್ಕದಂತೆ ತಪ್ಪಿಸಿ ರಕ್ಷಿಸಿ ಅದರ ಎದುರಿನಲ್ಲೇ ನಿನ್ನ ದೇಶಕ್ಕೋಸ್ಕರ ಭಯಂಕರವಾದ ಮಹತ್ಕಾರ್ಯಗಳನ್ನು ನಡಿಸಿದಿ.
24 ಇಸ್ರಾಯೇಲ್ಯರು ಸದಾಕಾಲವೂ ನಿನ್ನ ಪ್ರಜೆಗಳಾಗಿರಬೇಕೆಂದು ನಿರ್ಣಯಿಸಿದಿ; ಯೆಹೋವನೇ, ನೀನು ಅವರಿಗೆ ದೇವರಾದಿ.
25 ದೇವರೇ, ಯೆಹೋವನೇ, ನೀನು ನಿನ್ನ ಸೇವಕನನ್ನೂ ಅವನ ಮನೆಯನ್ನೂ ಕುರಿತು ಮಾಡಿದ ವಾಗ್ದಾನವನ್ನು ನೆರವೇರಿಸು. ಅದು ಸದಾ ಸ್ಥಿರವಾಗಿರಲಿ.
26 ಸೇನಾಧೀಶ್ವರನಾದ ಯೆಹೋವನು, ಇಸ್ರಾಯೇಲ್ದೇವರು ಎಂಬ ನಿನ್ನ ನಾಮಧೇಯಗಳಿಗೆ ಸದಾಕಾಲವೂ ಮಹಿಮೆಯುಂಟಾಗಲಿ. ನಿನ್ನ ಸೇವಕನಾದ ದಾವೀದನ ಮನೆಯು ನಿನ್ನ ಸನ್ನಿಧಿಯಲ್ಲಿ ಸ್ಥಿರವಾಗಿರಲಿ.
27 ಸೇನಾಧೀಶ್ವರನಾದ ಯೆಹೋವನೇ, ಇಸ್ರಾಯೇಲ್ದೇವರೇ, ನೀನು ನಿನ್ನ ಸೇವಕನಿಗೆ – ನಾನು ನಿನಗೋಸ್ಕರ ಮನೆ ಕಟ್ಟುವೆನೆಂದು ವಾಗ್ದಾನ ಮಾಡಿದ್ದರಿಂದ ಅವನು ಈ ಪ್ರಕಾರ ನಿನ್ನನ್ನು ಪ್ರಾರ್ಥಿಸುವದಕ್ಕೆ ಧೈರ್ಯಗೊಂಡನು.
28 ಕರ್ತನೇ, ಯೆಹೋವನೇ, ನಿನ್ನ ಸೇವಕನಿಗೆ ಈ ಶ್ರೇಷ್ಠ ವಾಗ್ದಾನಗಳನ್ನು ಮಾಡಿದ ನೀನು ದೇವರಾಗಿರುತ್ತೀ; ನಿನ್ನ ವಾಕ್ಯವು ಸತ್ಯವಾದದ್ದು.
29 ಆದದರಿಂದ ನೀನು ನಿನ್ನ ಸೇವಕನ ಮನೆಯನ್ನು ಆಶೀರ್ವದಿಸು; ಸದಾಕಾಲವೂ ಅದರ ಮೇಲೆ ನಿನ್ನ ಕಟಾಕ್ಷವಿರಲಿ. ಕರ್ತನೇ, ಯೆಹೋವನೇ, ವಾಗ್ದಾನಮಾಡಿದವನು ನೀನೇ. ನಿನ್ನ ಆಶೀರ್ವಾದದಿಂದ ನಿನ್ನ ಸೇವಕನ ಮನೆಯಲ್ಲಿ ನಿತ್ಯ ಸೌಭಾಗ್ಯವಿರಲಿ ಎಂದನು.
1 ಪೂರ್ವಕಾಲವೃತ್ತಾಂತ 15
ದಾವೀದನು ಯೆಹೋವನ ಮಂಜೂಷವನ್ನು ಚೀಯೋನಿಗೆ ತಂದದ್ದು
1 ದಾವೀದನು ತನ್ನ ನಗರದಲ್ಲಿ ತನಗೋಸ್ಕರ ಮನೆಗಳನ್ನು ಕಟ್ಟಿಸಿದ್ದಲ್ಲದೆ ದೇವಮಂಜೂಷಕ್ಕೋಸ್ಕರವೂ ಸ್ಥಳವನ್ನು ಸಿದ್ಧಮಾಡಿ ಗುಡಾರವನ್ನು ಹಾಕಿಸಿದನು.
2 ಆ ಕಾಲದಲ್ಲಿ ದಾವೀದನು – ಲೇವಿಯರು ಹೊರತಾಗಿ ಯಾರೂ ದೇವಮಂಜೂಷವನ್ನು ಹೊರಬಾರದು; ಅದನ್ನು ಹೊರುವದಕ್ಕೂ ಸದಾಕಾಲ ತನ್ನ ಸೇವೆಮಾಡುವದಕ್ಕೂ ಯೆಹೋವನು ಅವರನ್ನೇ ಆರಿಸಿಕೊಂಡಿದ್ದಾನೆಂದು ಹೇಳಿ
3 ಯೆಹೋವನ ಮಂಜೂಷವನ್ನು ತಾನು ಸಿದ್ಧಮಾಡಿದ ಸ್ಥಳಕ್ಕೆ ತರುವದಕ್ಕೋಸ್ಕರ ಎಲ್ಲಾ ಇಸ್ರಾಯೇಲ್ಯರನ್ನು ಯೆರೂಸಲೇಮಿಗೆ ಕರಸಿದನು.
4 ಅವನು ಕರಸಿದ ಆರೋನನ ವಂಶದವರೂ ಲೇವಿಯರೂ –
5 ಕೆಹಾತ್ಯರಲ್ಲಿ ಊರೀಯೇಲನೆಂಬ ಪ್ರಧಾನನೂ ಅವನ ಕುಟುಂಬದವರಾದ ನೂರಿಪ್ಪತ್ತು ಮಂದಿಯೂ;
6 ಮೆರಾರೀಯರಲ್ಲಿ ಅಸಾಯನೆಂಬ ಪ್ರಧಾನನೂ ಅವನ ಕುಟುಂಬದವರಾದ ಇನ್ನೂರಿಪ್ಪತ್ತು ಮಂದಿಯೂ;
7 ಗೇರ್ಷೋಮ್ಯರಲ್ಲಿ ಯೋವೇಲನೆಂಬ ಪ್ರಧಾನನೂ ಅವನ ಕುಟುಂಬದವರಾದ ನೂರ ಮೂವತ್ತು ಮಂದಿಯೂ;
8 ಎಲೀಚಾಫಾನ್ಯರಲ್ಲಿ ಶೆಮಾಯನೆಂಬ ಪ್ರಧಾನನೂ ಅವನ ಕುಟುಂಬದವರಾದ ಇನ್ನೂರು ಮಂದಿಯೂ;
9 ಹೆಬ್ರೋನ್ಯರಲ್ಲಿ ಎಲೀಯೇಲನೆಂಬ ಪ್ರಧಾನನೂ ಅವನ ಕುಟುಂಬದವರಾದ ಎಂಭತ್ತು ಮಂದಿಯೂ;
10 ಉಜ್ಜೀಯೇಲ್ಯರಲ್ಲಿ ಅಮ್ಮೀನಾದಾಬನೆಂಬ ಪ್ರಧಾನನೂ ಅವನ ಕುಟಂಬದವರಾದ ನೂರ ಹನ್ನೆರಡು ಮಂದಿಯೂ.
11 ಆಮೇಲೆ ದಾವೀದನು ಚಾದೋಕ್ ಎಬ್ಯಾತಾರರೆಂಬ ಯಾಜಕರನ್ನೂ ಊರೀಯೇಲ್, ಅಸಾಯ, ಯೋವೇಲ್, ಶೆಮಾಯ, ಎಲೀಯೇಲ್, ಅಮ್ಮೀನಾದಾಬ್ ಎಂಬ ಲೇವಿಯರನ್ನೂ ಕರೆದು ಅವರಿಗೆ
12 ಲೇವಿಯರಲ್ಲಿ ಗೋತ್ರಪ್ರಧಾನರಾದ ನೀವೂ ನಿಮ್ಮ ಸಹೋದರರೂ ನಿಮ್ಮನ್ನು ಶುದ್ಧಿಪಡಿಸಿಕೊಂಡು
ಇಸ್ರಾಯೇಲ್ ದೇವರಾದ ಯೆಹೋವನ ಮಂಜೂಷವನ್ನು ನಾನು ಸಿದ್ಧಮಾಡಿರುವ ಸ್ಥಳಕ್ಕೆ ತೆಗೆದುಕೊಂಡು ಬನ್ನಿರಿ.
13 ನೀವು ಮೊದಲನೆಯ ಸಾರಿ ಇರಲಿಲ್ಲವಾದದರಿಂದ ನಮ್ಮ ದೇವರಾದ ಯೆಹೋವನು ತನ್ನ ಸನ್ನಿಧಿಗೆ ಧರ್ಮವಿಧಿ ವಿರೋಧವಾಗಿ ಬಂದ ನಮ್ಮಲ್ಲಿ ಒಬ್ಬನನ್ನು ಸಂಹರಿಸಿದನಷ್ಟೆ ಎಂದು ಹೇಳಲು
14 ಯಾಜಕರೂ ಲೇವಿಯರೂ ಇಸ್ರಾಯೇಲ್ ದೇವರಾದ ಯೆಹೋವನ ಮಂಜೂಷವನ್ನು ತರುವದಕ್ಕೋಸ್ಕರ ತಮ್ಮನ್ನು ಶುದ್ಧಿಪಡಿಸಿಕೊಂಡರು.
15 ಮೋಶೆಯ ಮುಖಾಂತರವಾಗಿ ಕೊಡಲ್ಪಟ್ಟ ಯೆಹೋವನ ಆಜ್ಞಾನುಸಾರವಾಗಿ ಲೇವಿಯರು ದೇವಮಂಜೂಷಕ್ಕೆ ಕೋಲುಗಳನ್ನು ಸಿಕ್ಕಿಸಿ ಅದನ್ನು ಹೆಗಲಿನ ಮೇಲೆ ಹೊತ್ತುಕೊಂಡರು.
16 ಆಗ ದಾವೀದನು ಲೇವಿಯರ ಪ್ರಧಾನರಿಗೆ – ಗಾಯಕರಾದ ನಿಮ್ಮ ಸಹೋದರರನ್ನು ಸ್ವರಮಂಡಲ ಕಿನ್ನರಿ ತಾಳ ಮೊದಲಾದ ವಾದ್ಯಗಳಿಂದ ಉತ್ಸಾಹ ಧ್ವನಿಮಾಡುವದಕ್ಕಾಗಿ ನೇಮಿಸಿರಿ ಎಂದು ಆಜ್ಞಾಪಿಸಲು
17 ಅವರು ಯೋವೇಲನ ಮಗನಾದ ಹೇಮಾನ್, ಅವನ ಗೋತ್ರ ಬಂಧುವೂ ಬೆರೆಕ್ಯನ ಮಗನೂ ಆದ ಆಸಾಫ್, ತಮ್ಮ ಸಹೋದರರಾದ ಮೆರಾರೀಯರ ಕುಟುಂಬಕ್ಕೆ ಸೇರಿದ ಕೂಷಾಯನ ಮಗನಾದ ಏತಾನ್ ಎಂಬವರನ್ನಲ್ಲದೆ
18 ತಮ್ಮ ಸಹೋದರರೊಳಗೆ ಎರಡನೆಯ ತರಗತಿಯವರಾದ ಜೆಕರ್ಯ, ಬೇನ್, ಯಾಜೀಯೇಲ್, ಶೆಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಬೆನಾಯ, ಮಾಸೇಯ, ಮತ್ತಿತ್ಯ, ಎಲೀಫೆಲೇಹು, ಮಿಕ್ನೇಯ, ದ್ವಾರಪಾಲಕರಾದ ಓಬೇದೆದೋಮ್ ಯೆಗೀಯೇಲರು ಇವರನ್ನು ನೇಮಿಸಿದರು.
19 ಗಾಯಕರಾದ ಹೇಮಾನ್ ಆಸಾಫ್ ಏತಾನರು ಗಟ್ಟಿಯಾಗಿ ಕಂಚಿನ ತಾಳಗಳನ್ನು ಹೊಡೆಯುವವರು.
20 ಜೆಕರ್ಯ, ಅಜೀಯೇಲ್, ಶೆಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಮಾಸೇಯ, ಬೆನಾಯ ಎಂಬವರು ತಾರಕ ಸ್ಥಾಯಿಯ ಸ್ವರಮಂಡಲಗಳನ್ನು ಬಾರಿಸುವವರು.
21 ಮತ್ತಿತ್ಯ, ಎಲೀಫೆಲೇಹು, ಮಿಕ್ನೇಯ, ಓಬೇದೆದೋಮ್, ಯೆಗೀಯೇಲ್, ಅಜಜ್ಯ ಎಂಬವರು ಗಾಯನ ನಾಯಕರಾಗಿದ್ದು ಮಂದರಸ್ಥಾಯಿಯ ಕಿನ್ನರಿಗಳನ್ನು ಬಾರಿಸುವವರು.
22 ಬುದ್ಧಿವಂತನೂ ಹೊರೆಹೊರುವವರ ನಾಯಕನೂ ಆದ ಕೆನನ್ಯನು ಮಂಜೂಷ ಹೊತ್ತವರನ್ನು ನಡಿಸುವವನು.
23 ಬೆರೆಕ್ಯ, ಎಲ್ಕಾನ ಇವರು ಮಂಜೂಷಾಲಯದ ದ್ವಾರಪಾಲಕರು.
24 ಶೆಬನ್ಯ, ಯೋಷಾಫಾಟ್, ನೆತನೇಲ್, ಅಮಾಸೈ, ಜೆಕರ್ಯ, ಬೆನಾಯ, ಎಲೀಯೆಜೆರ್ ಎಂಬ ಯಾಜಕರು ತುತೂರಿಗಳನ್ನು ಊದುತ್ತಾ ದೇವಮಂಜೂಷದ ಮುಂದೆ ಹೋಗುವವರು. ಓಬೇದೆದೋಮ್, ಯೆಹೀಯ ಎಂಬವರು ಮಂಜೂಷಾಲಯದ ದ್ವಾರಪಾಲಕರು.
25 ದಾವೀದನೂ ಇಸ್ರಾಯೇಲ್ಯರ ಹಿರಿಯರೂ ಸಹಸ್ರಾಧಿಪತಿಗಳೂ ಓಬೇದೆದೋಮನ ಮನೆಯಲ್ಲಿದ್ದ ಯೆಹೋವನ ನಿಬಂಧನ ಮಂಜೂಷವನ್ನು
26 ಉತ್ಸವದಿಂದ ತರುತ್ತಿರುವಾಗ ಅದನ್ನು ಹೊತ್ತ ಲೇವಿಯರಿಗೆ ದೇವರ ಸಹಾಯ ದೊರೆತದರಿಂದ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಯಜ್ಞಮಾಡಿದರು.
27 ದಾವೀದನೂ ಮಂಜೂಷವನ್ನು ಹೊತ್ತ ಮತ್ತು ವಾದ್ಯಮಾಡುವ ಎಲ್ಲಾ ಲೇವಿಯರೂ ಹೊರುವವರ ಮುಖ್ಯಸ್ಥನಾದ ಕೆನನ್ಯನೂ ನೂಲಿನ ನಿಲುವಂಗಿಗಳನ್ನು ಧರಿಸಿಕೊಂಡಿದ್ದರು. ದಾವೀದನು ಇದರ ಹೊರತಾಗಿ ನಾರಿನ ಏಫೋದನ್ನೂ ಧರಿಸಿಕೊಂಡಿದ್ದನು.
28 ಹೀಗೆ ಎಲ್ಲಾ ಇಸ್ರಾಯೇಲ್ಯರು ಆರ್ಭಟಿಸುತ್ತಾ ಕೊಂಬು ತುತೂರಿಗಳನ್ನು ಗಟ್ಟಿಯಾಗಿ ಊದುತ್ತಾ ತಾಳಹೊಡೆಯುತ್ತಾ ಕಿನ್ನರಿ ಸ್ವರಮಂಡಲಗಳನ್ನು ಬಾರಿಸುತ್ತಾ ಯೆಹೋವನ ನಿಬಂಧನಮಂಜೂಷವನ್ನು ತಂದರು.
29 ಯೆಹೋವನ ನಿಬಂಧನ ಮಂಜೂಷವು ದಾವೀದನಗರಕ್ಕೆ ಬರುತ್ತಿರುವಾಗ ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ಹಣಕಿನೋಡಿ ದಾವೀದನು ಕುಣಿಯುತ್ತಾ ಹಾರುತ್ತಾ ಇರುವದನ್ನು ಕಂಡು ಮನಸ್ಸಿನಲ್ಲಿ ಅವನನ್ನು ತಿರಸ್ಕರಿಸಿದಳು.
2 ಸಮುವೇಲ 11
ದಾವೀದನು ಮತ್ತು ಬತ್ಷೆಬೆ
1 ಮರುವರುಷ ಅರಸರು ಯುದ್ಧಕ್ಕೆ ಹೊರಡುವ ಸಮಯದಲ್ಲಿ ದಾವೀದನು ಯೋವಾಬನನ್ನೂ ತನ್ನ ಸೇವಕರನ್ನೂ ಎಲ್ಲಾ ಇಸ್ರಾಯೇಲ್ಯರನ್ನೂ ಯುದ್ಧಕ್ಕೆ ಕಳುಹಿಸಿದನು. ಇವರು ಹೋಗಿ ಅಮ್ಮೋನಿಯರ ಪ್ರಾಂತಗಳನ್ನು ಹಾಳುಮಾಡಿ ರಬ್ಬಕ್ಕೆ ಮುತ್ತಿಗೆಹಾಕಿದರು. ದಾವೀದನು ಯೆರೂಸಲೇಮಿನಲ್ಲಿಯೇ ಇದ್ದನು.
2 ಅವನು ಒಂದು ದಿವಸ ಸಂಜೇ ಹೊತ್ತಿನಲ್ಲಿ ಮಂಚದಿಂದೆದ್ದು ಅರಮನೆಯ ಮಾಳಿಗೆಯ ಮೇಲೆ ತಿರುಗಾಡುತ್ತಿರುವಾಗ ಅಲ್ಲಿಂದ ಬಹುಸುಂದರಿಯಾದ ಒಬ್ಬ ಸ್ತ್ರೀ ಸ್ನಾನಮಾಡುವದನ್ನು ಕಂಡನು.
3 ಕೂಡಲೆ ದಾವೀದನು ಒಬ್ಬನನ್ನು ಕರೆದು ಆ ಸ್ತ್ರೀ ಯಾರೆಂದು ಕೇಳಲು ಅವನು – ಆಕೆಯು ಎಲೀಯಾಮನ ಮಗಳೂ ಹಿತ್ತಿಯನಾದ ಊರೀಯನ ಹೆಂಡತಿಯೂ ಆಗಿರುವ ಬತ್ಷೆಬೆಯಲ್ಲವೋ ಎಂದು ಉತ್ತರ ಕೊಟ್ಟನು.
4 ಆಗ ದಾವೀದನು ಆಗಲೇ ಋತುಸ್ನಾನಮಾಡಿಕೊಂಡಿದ್ದ ಆಕೆಯನ್ನು ದೂತರ ಮುಖಾಂತರವಾಗಿ ಕರೇಕಳುಹಿಸಿದನು; ಆಕೆಯು ಬರಲು ಆಕೆಯನ್ನು ಕೂಡಿದನು.
5 ಅನಂತರ ಆಕೆಯು ತನ್ನ ಮನೆಗೆ ಹೋದಳು. ಆಕೆಯು ತಾನು ಗರ್ಭಧರಿಸಿದ್ದು ಗೊತ್ತಾದಾಗ ದಾವೀದನಿಗೆ ವರ್ತಮಾನ ಕಳುಹಿಸಿದಳು.
6 ಒಡನೆ ದಾವೀದನು ದೂತರ ಮುಖಾಂತರವಾಗಿ ಯೋವಾಬನಿಗೆ – ಹಿತ್ತಿಯನಾದ ಊರೀಯನನ್ನು ನನ್ನ ಬಳಿಗೆ ಕಳುಹಿಸು ಎಂದು ಆಜ್ಞಾಪಿಸಿದನು. ಅವನು ಊರೀಯನನ್ನು ಕಳುಹಿಸಿದನು.
7 ಊರೀಯನು ಬಂದಾಗ ದಾವೀದನು – ಯೋವಾಬನೂ ಸೈನ್ಯದವರೂ ಹೇಗಿರುತ್ತಾರೆ? ಯುದ್ಧವು ಹೇಗೆ ನಡೆದದೆ ಎಂದು ವಿಚಾರಿಸಿದನಂತರ ಅವನಿಗೆ –
8 ಮನೆಗೆ ಹೋಗಿ ಕೈಕಾಲು ತೊಳೆದುಕೋ ಎಂದು ಹೇಳಿದನು. ಊರೀಯನು ಅರಮನೆಯಿಂದ ಹೊರಟ ಕೂಡಲೆ ಅವನ ಹಿಂದೆಯೇ ಅರಸನ ಭೋಜನ ಪದಾರ್ಥಗಳೂ ಹೋದವು.
9 ಆದರೆ ಊರೀಯನು ತನ್ನ ಮನೆಗೆ ಹೋಗದೆ ಅರಸನ ಸೇವಕರೊಡನೆ ಅರಮನೆಯ ಬಾಗಲಲ್ಲೇ ಮಲಗಿಕೊಂಡನು.
10 ಊರೀಯನು ತನ್ನ ಮನೆಗೆ ಹೋಗಲಿಲ್ಲ ಎಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ ಇವನು ಅವನಿಗೆ – ನೀನು ಪ್ರಯಾಣಮಾಡಿಕೊಂಡು ಬಂದಿಯಲ್ಲಾ; ಯಾಕೆ ಮನೆಗೆ ಹೋಗಲಿಲ್ಲ ಅಂದನು.
11 ಅದಕ್ಕೆ ಊರೀಯನು – ಒಡಂಬಡಿಕೆಯ ಮಂಜೂಷವೂ ಇಸ್ರಾಯೇಲ್ಯರೂ ಯೆಹೂದ್ಯರೂ ಗುಡಾರಗಳಲ್ಲಿ ವಾಸವಾಗಿದ್ದಾರೆ. ನನ್ನ ಒಡೆಯನಾದ ಯೋವಾಬನೂ ಅವನ ಸೇವಕರೂ ಬೈಲಿನಲ್ಲಿ ಪಾಳೆಯ ಮಾಡಿಕೊಂಡಿದ್ದಾರೆ. ಹೀಗಿರುವಲ್ಲಿ ನಾನು ನನ್ನ ಮನೆಗೆ ಹೋಗಿ ಉಂಡು ಕುಡಿದು ಹೆಂಡತಿಯೊಡನೆ ಮಲಗಿಕೊಳ್ಳುವದು ಹೇಗೆ? ನಿನ್ನಾಣೆ, ನಿನ್ನ ಜೀವದ ಆಣೆ, ನಾನು ಇಂಥದನ್ನು ಮಾಡುವದೇ ಇಲ್ಲ ಎಂದು ಉತ್ತರಕೊಟ್ಟನು.
12 ಆಗ ದಾವೀದನು ಅವನಿಗೆ – ನೀನು ಈ ಹೊತ್ತು ಇಲ್ಲೇ ಇರು, ನಾಳೆ ನಿನ್ನನ್ನು ಕಳುಹಿಸುತ್ತೇನೆ ಎಂದು ಆಜ್ಞಾಪಿಸಿದನು. ಆದದರಿಂದ ಊರೀಯನು ಆ ದಿನ ಯೆರೂಸಲೇಮಿನಲ್ಲೇ ಇದ್ದನು.
13 ಮರುದಿನ ದಾವೀದನು ಅವನನ್ನು ಅನ್ನಪಾನತೆಗೆದುಕೊಳ್ಳಬೇಕೆಂದು ತನ್ನ ಮನೆಗೆ ಕರಕೊಂಡುಹೋಗಿ ಮತ್ತನನ್ನಾಗಿ ಮಾಡಿದನು. ಆದರೆ ಆ ರಾತ್ರಿಯಲ್ಲಿಯೂ ಅವನು ಹೋಗಿ ತನ್ನ ಯಜಮಾನನ ಸೇವಕರ ಹತ್ತಿರ ಹಾಸಿಗೆ ಹಾಸಿ ಮಲಗಿಕೊಂಡನೇ ಹೊರತು ತನ್ನ ಮನೆಗೆ ಹೋಗಲಿಲ್ಲ.
14 ಮರುದಿನ ಬೆಳಿಗ್ಗೆ ದಾವೀದನು ಯೋವಾಬನಿಗೆ ಒಂದು ಪತ್ರವನ್ನು ಬರೆದು ಅದನ್ನು ಊರೀಯನ ಕೈಯಲ್ಲಿ ಕೊಟ್ಟು ಕಳುಹಿಸಿದನು.
15 ಅದರಲ್ಲಿದ್ದದ್ದೇನಂದರೆ – ಊರೀಯನು ಗಾಯಹೊಂದಿ ಸಾಯುವಂತೆ ಅವನನ್ನು ಘೋರಯುದ್ಧ ನಡೆಯುತ್ತಿರುವ ಕಡೆಗೆ ಮುಂಭಾಗದಲ್ಲಿ ನಿಲ್ಲಿಸಿ ನೀವು ಹಿಂದಕ್ಕೆ ಸರಿದುಕೊಳ್ಳಿರಿ ಎಂಬದೇ.
16 ಯೋವಾಬನು ಪಟ್ಟಣಕ್ಕೆ ಮುತ್ತಿಗೆಹಾಕುವಾಗ ಶೂರರಾದ ಶತ್ರುಸೈನಿಕರೆಲ್ಲಿರುತ್ತಾರೆಂದು ಗೊತ್ತುಮಾಡಿಕೊಂಡು ಊರೀಯನನ್ನು ಅಲ್ಲಿ ನಿಲ್ಲಿಸಿದನು.
17 ಆ ಊರಿನ ಜನರು ಹೊರಗೆ ಬಂದು ಯೋವಾಬನೊಡನೆ ಕಾದಿದಾಗ ದಾವೀದನ ಸೇವಕರಲ್ಲಿ ಕೆಲವರು ಸತ್ತರು. ಹಿತ್ತಿಯನಾದ ಊರೀಯನೂ ಮಡಿದನು.
18 ಅನಂತರ ಯೋವಾಬನು ಒಬ್ಬ ದೂತನನ್ನು ಕರೆದು ಅವನಿಗೆ – ನೀನು ಹೋಗಿ ದಾವೀದನಿಗೆ ಯುದ್ಧ ವರ್ತಮಾನವನ್ನೆಲ್ಲಾ ತಿಳಿಸು.
19 ನೀನು ಯುದ್ಧ ಸಮಾಚಾರವನ್ನು ಹೇಳಿ ಮುಗಿಸಿದನಂತರ ಅರಸನು ಮುನಿದು ನಿನ್ನನ್ನು –
20 ನೀವು ಯುದ್ಧಮಾಡುವದಕ್ಕಾಗಿ ಪಟ್ಟಣದ ಸಮೀಪಕ್ಕೆ ಹೋದದ್ದೇಕೆ? ಶತ್ರುಗಳು ಊರುಗೋಡೆಯ ಮೇಲಣಿಂದ ಏನಾದರೂ ಬೀಸಾಡಬಹುದಲ್ಲವೋ?
21 ಯೆರುಬ್ಬೆಷೆತನ ಮಗನಾದ ಅಬೀಮೆಲೆಕನನ್ನು ಕೊಂದವರಾರೆಂದು ನಿಮಗೆ ಗೊತ್ತಿಲ್ಲವೋ? ತೇಬೇಚಿನಲ್ಲಿ ಒಬ್ಬ ಹೆಂಗಸು ಗೋಡೆಯ ಮೇಲಣಿಂದ ಒಂದು ಬೀಸುವ ಕಲ್ಲನ್ನು ಅವನ ಮೇಲೆ ಎತ್ತಿಹಾಕಿ ಅವನನ್ನು ಕೊಂದಳಲ್ಲವೇ. ಹೀಗಿರುವದರಿಂದ ನೀವು ಗೋಡೆಯ ಸಮೀಪಕ್ಕೆ ಹೋದದ್ದೇನು ಎಂದು ಕೇಳಿದರೆ ನೀನು – ಹಿತ್ತಿಯನಾದ ನಿನ್ನ ಸೇವಕ ಊರೀಯನೂ ಮೃತಿಹೊಂದಿದನೆಂದು ಹೇಳು ಎಂಬದಾಗಿ
22 ಆಜ್ಞಾಪಿಸಿ ಅವನನ್ನು ಕಳುಹಿಸಿದನು. ಆ ದೂತನು ಹೋಗಿ
23 ಯೋವಾಬನ ಆಜ್ಞೆಯಂತೆ ದಾವೀದನಿಗೆ ತಿಳಿಸಿದ್ದೇನಂದರೆ – ಆ ಊರಿನವರು ಮಹಾಬಲದೊಡನೆ ಯುದ್ಧಮಾಡುವದಕ್ಕೆ ಬೈಲಿಗೆ ಬಂದರು; ನಾವು ಅವರನ್ನು ಊರುಬಾಗಲಿನವರೆಗೆ ಹಿಂದಟ್ಟಿದೆವು.
24 ಆಗ ಬಿಲ್ಲುಗಾರರು ಗೋಡೆಯ ಮೇಲಣಿಂದ ನಿನ್ನ ಸೇವಕರ ಮೇಲೆ ಬಾಣಗಳನ್ನು ಎಸೆದದರಿಂದ ಅವರಲ್ಲಿ ಕೆಲವರು ಸತ್ತರು. ಹಿತ್ತಿಯನಾದ ನಿನ್ನ ಸೇವಕ ಊರೀಯನೂ ಮಡಿದನು ಎಂಬದೇ.
25 ಆಗ ದಾವೀದನು ದೂತನಿಗೆ ನೀನು ಹೋಗಿ – ಇದಕ್ಕೋಸ್ಕರವಾಗಿ ವ್ಯಸನ ಪಡಬೇಡ; ಕತ್ತಿಯು ಈ ಹೊತ್ತು ಒಬ್ಬನನ್ನು ನುಂಗಿದರೆ ನಾಳೆ ಇನ್ನೊಬ್ಬನನ್ನು ನುಂಗುವದು. ಮತ್ತಷ್ಟು ಶೂರತನದಿಂದ ಯುದ್ಧಮಾಡಿ ಪಟ್ಟಣವನ್ನು ಕೆಡವಿಬಿಡಿರಿ ಎಂಬದಾಗಿ ಅರಸನು ಆಜ್ಞಾಪಿಸುತ್ತಾನೆಂದು ಯೋವಾಬನಿಗೆ ಹೇಳಿ ಅವನನ್ನು ಧೈರ್ಯಪಡಿಸು ಅಂದನು.
26 ಊರೀಯನ ಮರಣವಾರ್ತೆಯನ್ನು ಅವನ ಹೆಂಡತಿಯು ಕೇಳಿ ಗಂಡನಿಗೋಸ್ಕರ ಗೋಳಾಡಿದಳು.
27 ದುಃಖಕಾಲ ತೀರಿದನಂತರ ದಾವೀದನು ಆಕೆಯನ್ನು ತನ್ನ ಮನೆಗೆ ಕರತರಿಸಿ ತನ್ನ ಹೆಂಡತಿಯನ್ನಾಗಿ ಮಾಡಿಕೊಂಡನು; ಆಕೆಯು ಅವನಿಂದ ಒಬ್ಬ ಮಗನನ್ನು ಹೆತ್ತಳು. ದಾವೀದನ ಈ ಕೃತ್ಯವು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿತ್ತು.
2 ಸಮುವೇಲ 12
ದೇವರು ನಾತಾನನ ಮುಖಾಂತರವಾಗಿ ದಾವೀದನಿಗೆ ಶಿಕ್ಷೆಯನ್ನು ಮುಂತಿಳಿಸಿದ್ದೂ ಸೊಲೊಮೋನನ ಜನನವೂ
1 ಯೆಹೋವನು ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದನು. ಅವನು ಇವನ ಹತ್ತಿರ ಬಂದು ಹೇಳಿದ್ದೇನಂದರೆ – ಒಂದು ಊರಲ್ಲಿ ಇಬ್ಬರು ಮನುಷ್ಯರಿದ್ದರು; ಒಬ್ಬನು ಐಶ್ವರ್ಯವಂತನು, ಇನ್ನೊಬ್ಬನು ಬಡವನು.
2 ಐಶ್ವರ್ಯವಂತನಿಗೆ ಬಹಳ ಕುರಿದನಗಳಿದ್ದವು.
3 ಬಡವನಿಗೆ ಒಂದು ಕುರಿಮರಿಯ ಹೊರತು ಬೇರೇನೂ ಇರಲಿಲ್ಲ. ಅವನು ಅದನ್ನು ಕೊಂಡುಕೊಂಡು ಸಾಕುತ್ತಿದ್ದನು. ಅದು ದೊಡ್ಡದಾಗುವವರೆಗೆ ಮಗಳಂತೆ ಅವನ ಸಂಗಡಲೂ ಅವನ ಮಕ್ಕಳ ಸಂಗಡಲೂ ಇದ್ದುಕೊಂಡು ಅವನೊಡನೆ ರೊಟ್ಟಿ ತಿನ್ನುತ್ತಾ ಅವನ ಪಾತ್ರೆಯಲ್ಲೇ ನೀರು ಕುಡಿಯುತ್ತಾ ಇತ್ತು; ಅವನ ಎದೆಯ ಮೇಲೆಯೇ ಒರಗಿಕೊಂಡು ನಿದ್ರೆ ಮಾಡುತ್ತಿತ್ತು.
4 ಒಂದು ದಿವಸ ಐಶ್ವರ್ಯವಂತನ ಮನೆಗೆ ಒಬ್ಬ ಪ್ರಯಾಣಿಕನು ಬಂದನು. ಆಗ ಐಶ್ವರ್ಯವಂತನು ತನ್ನ ಕುರಿದನಗಳಿಂದ ಏನೂ ತೆಗೆದುಕೊಳ್ಳಮನಸ್ಸಿಲ್ಲದೆ ಆ ಬಡವನ ಕುರಿಮರಿಯನ್ನು ಹಿಡಿದು ಅತಿಥಿಗೋಸ್ಕರ ಅದನ್ನು ಅಡಿಗೆ ಮಾಡಿಸಿದನು ಎಂಬದೇ.
5 ಇದನ್ನು ಕೇಳಿ ದಾವೀದನು ಆ ಮನುಷ್ಯನ ಮೇಲೆ ಬಹಳವಾಗಿ ಕೋಪಗೊಂಡು ನಾತಾನನಿಗೆ – ಯೆಹೋವನಾಣೆ, ಆ ಮನುಷ್ಯನು ಸಾಯಲೇ ಬೇಕು.
6 ಅವನು ಕರುಣೆಯಿಲ್ಲದೆ ಹೀಗೆ ಮಾಡಿದ್ದರಿಂದ ಆ ಕುರಿಮರಿಗಾಗಿ ನಾಲ್ಕರಷ್ಟು ಹಿಂದಕ್ಕೆ ಕೊಡಬೇಕು ಅಂದನು.
7 ಆಗ ನಾತಾನನು ದಾವೀದನನ್ನು ನೋಡಿ – ಆ ಮನುಷ್ಯನು ನೀನೇ. ಇಸ್ರಾಯೇಲ್ ದೇವರಾದ ಯೆಹೋವನು ನಿನಗೆ ಹೇಳುವದೇನಂದರೆ – ನಿನ್ನನ್ನು ಅಭಿಷೇಕಿಸಿ ಇಸ್ರಾಯೇಲ್ಯರ ಅರಸನನ್ನಾಗಿ ಮಾಡಿದವನೂ ಸೌಲನ ಕೈಗೆ ಸಿಕ್ಕದಂತೆ ತಪ್ಪಿಸಿದವನೂ ನಾನೇ.
8 ಇದಲ್ಲದೆ ನಾನು ನಿನಗೆ ನಿನ್ನ ಯಜಮಾನನ ಮನೆಯನ್ನು ಒಪ್ಪಿಸಿದೆನು; ಅವನ ಹೆಂಡತಿಯರನ್ನು ನಿನ್ನ ಮಗ್ಗಲಿಗೆ ಕೊಟ್ಟೆನು. ಇಸ್ರಾಯೇಲ್ ಮತ್ತು ಯೆಹೂದ ಕುಲಗಳನ್ನು ನಿನಗೆ ವಶಪಡಿಸಿದೆನು. ಇದು ಸಾಕಾಗಿರದಿದ್ದರೆ ನಾನು ನಿನಗೆ ಇನ್ನೂ ಬೇಕಾದದ್ದನ್ನು ಕೊಡುತ್ತಿದ್ದೆನು.
9 ಹೀಗಿರಲು ನೀನು ಯೆಹೋವನಾದ ನನ್ನ ಆಜ್ಞೆಯನ್ನು ತಿರಸ್ಕರಿಸಿ ನನ್ನ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವದನ್ನು ಮಾಡಿದ್ದೇನು? ನೀನು ಹಿತ್ತಿಯನಾದ ಊರೀಯನನ್ನು ಕತ್ತಿಯಿಂದ ಕೊಲ್ಲಿಸಿ ಅವನ ಹೆಂಡತಿಯನ್ನು ನಿನ್ನ ಹೆಂಡತಿಯನ್ನಾಗಿ ತೆಗೆದುಕೊಂಡಿ.
10 ನೀನು ನನ್ನ ಆಜ್ಞೆಯನ್ನು ತಿರಸ್ಕರಿಸಿದದರಿಂದಲೂ ಹಿತ್ತಿಯನಾದ ಊರೀಯನನ್ನು ಅಮ್ಮೋನಿಯರ ಕತ್ತಿಯಿಂದ ಕೊಲ್ಲಿಸಿ ಅವನ ಹೆಂಡತಿಯನ್ನು ನಿನ್ನ ಹೆಂಡತಿಯನ್ನಾಗಿ ತೆಗೆದುಕೊಂಡದರಿಂದಲೂ ಕತ್ತಿಯು ನಿನ್ನ ಮನೆಯನ್ನು ಬಿಟ್ಟು ಹೋಗುವದಿಲ್ಲ.
11 ಯೆಹೋವನಾದ ನನ್ನ ಮಾತನ್ನು ಕೇಳು – ನಾನು ನಿನ್ನ ಮನೆಯವರಿಂದಲೇ ನಿನಗೆ ಕೇಡು ಉಂಟಾಗುವಂತೆ ಮಾಡುವೆನು. ನಿನ್ನ ಹೆಂಡತಿಯರನ್ನು ತೆಗೆದು ನಿನ್ನೆದುರಿನಲ್ಲಿಯೇ ಇನ್ನೊಬ್ಬನಿಗೆ ಕೊಡುವೆನು. ಅವನು ಹಗಲಿನಲ್ಲಿಯೇ ಅವರ ಕೂಡ ಮಲಗುವನು. ನೀನು ಅದನ್ನು ಗುಪ್ತವಾಗಿ ಮಾಡಿದಿ;
12 ನಾನು ಹೇಳುವ ಮಾತಾದರೋ ಎಲ್ಲಾ ಇಸ್ರಾಯೇಲ್ಯರ ಮುಂದೆ ಪ್ರಕಟವಾಗಿ ನೆರವೇರುವದು ಎಂಬದೇ ಅಂದನು.
13 ಆಗ ದಾವೀದನು ನಾತಾನನಿಗೆ – ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇನೆ ಎಂದು ಹೇಳಿದನು. ನಾತಾನನು ಅವನಿಗೆ – ಯೆಹೋವನು ನಿನ್ನ ಪಾಪವನ್ನು ಕ್ಷಮಿಸಿದ್ದಾನೆ, ನೀನು ಸಾಯುವದಿಲ್ಲ;
14 ಆದರೂ ನೀನು ಈ ಕೃತ್ಯದಿಂದ ಯೆಹೋವನ ವೈರಿಗಳು ಆತನನ್ನು ಬಹಳವಾಗಿ ನಿಂದಿಸುವದಕ್ಕೆ ಆಸ್ಪದ ಕೊಟ್ಟದರಿಂದ ನಿನ್ನಿಂದ ಹುಟ್ಟಿರುವ ಮಗುವು ಸತ್ತೇ ಹೋಗುವದು
15 ಎಂದು ಹೇಳಿ ಮನೆಗೆ ಹೊರಟು ಹೋದನು. ಊರೀಯನ ಹೆಂಡತಿಯಲ್ಲಿ ದಾವೀದನಿಗೆ ಹುಟ್ಟಿದ ಮಗುವು ಯೆಹೋವನ ಪೆಟ್ಟಿನಿಂದ ಬಹುವಾಗಿ ಅಸ್ವಸ್ಥವಾಯಿತು.
16 ಆದದರಿಂದ ದಾವೀದನು ಮಗುವಿಗೋಸ್ಕರ ದೇವರನ್ನು ಪ್ರಾರ್ಥಿಸುತ್ತಾ ಉಪವಾಸಮಾಡುತ್ತಾ ಒಳಕೋಣೆಯಲ್ಲಿ ನೆಲದ ಮೇಲೆಯೇ ಬಿದ್ದುಕೊಂಡು ರಾತ್ರಿಕಳೆಯುತ್ತಿದ್ದನು.
17 ಅವನ ಮನೆಯ ಹಿರೀಸೇವಕರು ಅವನನ್ನು ಎಬ್ಬಿಸುವದಕ್ಕೆ ಹೋದರು. ಆದರೆ ಅವನು ಏಳಲೂ ಇಲ್ಲ. ಅವರೊಡನೆ ಆಹಾರ ತೆಗೆದುಕೊಳ್ಳಲೂ ಇಲ್ಲ.
18 ಏಳನೆಯ ದಿನದಲ್ಲಿ ಮಗುವು ಸತ್ತಿತು; ಅವನ ಸೇವಕರು ಭಯಪಟ್ಟು ಈ ವರ್ತಮಾನವನ್ನು ದಾವೀದನಿಗೆ ತಿಳಿಸಲಿಲ್ಲ. ಅವರು – ಹುಡುಗನು ಜೀವದಿಂದಿದ್ದಾಗಲೇ ಅವನು ನಮ್ಮ ಸಂತೈಸುವಿಕೆಯನ್ನು ಲಕ್ಷಿಸಲಿಲ್ಲ. ಹೀಗಿರುವಲ್ಲಿ ಮಗುವಿನ ಮರಣವಾರ್ತೆಯನ್ನು ಅವನಿಗೆ ತಿಳಿಸಿದರೆ ಅವನು ತನಗೆ ಏನಾದರೂ ಕೇಡುಮಾಡಿಕೊಂಡಾನಲ್ಲವೇ ಎಂದು ಮಾತಾಡಿಕೊಳ್ಳುತ್ತಿದ್ದರು.
19 ಸೇವಕರು ಈ ಪ್ರಕಾರ ಗುಜುಗುಜು ಮಾತಾಡುವದನ್ನು ದಾವೀದನು ಕಂಡು ಮಗುವು ಮೃತಿಹೊಂದಿತೆಂದು ತಿಳಿದು ಸೇವಕರನ್ನು – ಮಗುವು ಸತ್ತಿತೋ ಎಂದು ಕೇಳಿದನು. ಅವರು – ಹೌದು, ಸತ್ತಿತು ಎಂದು ಉತ್ತರಕೊಟ್ಟರು.
20 ಆಗ ದಾವೀದನು ನೆಲದಿಂದೆದ್ದು ಸ್ನಾನಮಾಡಿ ತೈಲ ಹಚ್ಚಿಕೊಂಡು ತನ್ನ ಬಟ್ಟೆಗಳನ್ನು ಬದಲಿಸಿ ಯೆಹೋವನ ಮಂದಿರಕ್ಕೆ ಹೋಗಿ ಆರಾಧನೆ ಮಾಡಿದನು. ಅನಂತರ ಮನೆಗೆ ಬಂದು ಆಹಾರತರಿಸಿ ಊಟಮಾಡಿದನು.
21 ಇದನ್ನು ನೋಡಿ ಅವನ ಸೇವಕರು ಅವನಿಗೆ – ಇದೇನು ನೀನು ಮಾಡಿದ್ದು? ಹುಡುಗನು ಜೀವದಿಂದಿದ್ದಾಗ ಅಳುತ್ತಾ ಉಪವಾಸವಾಗಿದ್ದಿ; ಹುಡುಗನು ಸತ್ತನಂತರ ಎದ್ದು ಊಟಮಾಡಿದಿ ಅಂದರು. 22ದಾವೀದನು ಅವರಿಗೆ – ಹುಡುಗನು ಜೀವದಿಂದಿದ್ದಾಗ ಒಂದು ವೇಳೆ ಯೆಹೋವನು ಕೃಪೆಮಾಡಿ ಅವನನ್ನು ಉಳಿಸಾನು ಅಂದುಕೊಂಡು ಉಪವಾಸಮಾಡಿದೆನು, ಅತ್ತೆನು.
23 ಈಗ ಸತ್ತಿದ್ದಾನಲ್ಲಾ, ನಾನೇಕೆ ಉಪವಾಸಮಾಡಬೇಕು? ಅವನನ್ನು ಹಿಂದಕ್ಕೆ ತರುವದು ನನ್ನಿಂದಾದೀತೇ? ನಾನಾಗಿ ಅವನ ಬಳಿಗೆ ಹೋಗಬೇಕೇ ಹೊರತು ಅವನು ನನ್ನ ಬಳಿಗೆ ಬರುವದಿಲ್ಲ ಎಂದು ಉತ್ತರ ಕೊಟ್ಟನು.
24 ದಾವೀದನು ತನ್ನ ಹೆಂಡತಿಯಾದ ಬತ್ಷೆಬೆಯ ಬಳಿಗೆ ಹೋಗಿ ಆಕೆಯನ್ನು ಸಂತೈಸಿ ಆಕೆಯ ಸಂಗಡ ಮಲಗಿದನು. ಆಕೆ ಮಗನನ್ನು ಹೆತ್ತಾಗ ಅವನಿಗೆ ಸೊಲಮೋನನೆಂದು ಹೆಸರಿಟ್ಟನು. ಯೆಹೋವನು ಹುಡುಗನನ್ನು ಪ್ರೀತಿಸಿದನು;
25 ಪ್ರವಾದಿಯಾದ ನಾತಾನನು ಯೆಹೋವನು ತನಗೆ ಆಜ್ಞಾಪಿಸಿದಂತೆ ಆತನಿಗೋಸ್ಕರವಾಗಿ ಆ ಹುಡುಗನಿಗೆ ಯೆದೀದ್ಯನು ಎಂದು ಹೆಸರಿಟ್ಟನು.
26 ಯೋವಾಬನು ಅಮ್ಮೋನಿಯರ ಪಟ್ಟಣವಾದ ರಬ್ಬಕ್ಕೆ ಮುತ್ತಿಗೆಹಾಕಿ ಅರಮನೆಯಿದ್ದ ಭಾಗವನ್ನು ಸ್ವಾಧೀನಮಾಡಿಕೊಂಡು
27 ದಾವೀದನಿಗೆ ದೂತರ ಮುಖಾಂತರವಾಗಿ – ನಾನು ರಬ್ಬಕ್ಕೆ ಮುತ್ತಿಗೆಹಾಕಿ ಹೊಳೆಯ ಬಳಿಯಲ್ಲಿರುವ ಭಾಗವನ್ನು ಸ್ವಾಧೀನ ಮಾಡಿಕೊಂಡಿದ್ದೇನೆ.
28 ನೀನು ಬೇಗನೆ ಉಳಿದ ಸೈನ್ಯವನ್ನು ಕೂಡಿಸಿಕೊಂಡು ಬಂದು ಪಟ್ಟಣಕ್ಕೆ ಮುತ್ತಿಗೆ ಹಾಕಿ ಉಳಿದ ಭಾಗವನ್ನು ಸ್ವಾಧೀನಪಡಿಸಿಕೋ; ಅದನ್ನು ನಾನೇ ಹಿಡಿದರೆ ಅದಕ್ಕೆ ನನ್ನ ಹೆಸರು ಬರುವದು ಎಂದು ಹೇಳಿ ಕಳುಹಿಸಿದನು.
29 ಆಗ ದಾವೀದನು ಜನರೆಲ್ಲರನ್ನೂ ಕೂಡಿಸಿಕೊಂಡು ಹೋಗಿ ರಬ್ಬಕ್ಕೆ ಮುತ್ತಿಗೆಹಾಕಿ ಅದನ್ನು ವಶಮಾಡಿಕೊಂಡನು.
30 ಇದಲ್ಲದೆ ಅವನು ಅವರ ಮಲ್ಕಾಮಮೂರ್ತಿಯ ತಲೆಯ ಮೇಲಿದ್ದ ಬಂಗಾರದ ಕಿರೀಟವನ್ನು ತೆಗೆದುಕೊಂಡನು; ಅದು ನಾಲ್ಕು ಸಾವಿರ ತೊಲೆ ತೂಕದ್ದು. ಅದರಲ್ಲಿದ್ದ ಮಣಿಯನ್ನು ದಾವೀದನು ತನ್ನ ಶಿರಸ್ಸಿನಲ್ಲಿ ಧರಿಸಿಕೊಂಡನು. ಆ ಪಟ್ಟಣದಿಂದ ದೊಡ್ಡ ಕೊಳ್ಳೆಯನ್ನು ಒಯ್ದನು.
31 ಊರಿನ ನಿವಾಸಿಗಳನ್ನು ಹಿಡಿದು ಗರಗಸ ಗುದ್ದಲಿ ಕೊಡಲಿಗಳಿಂದ ಕೆಲಸ ಮಾಡುವದಕ್ಕೂ ಇಟ್ಟಿಗೆಗಳನ್ನು ಮಾಡುವದಕ್ಕೂ ಹಚ್ಚಿದನು. ಅಮ್ಮೋನಿಯರ ಎಲ್ಲಾ ಪಟ್ಟಣದವರಿಗೂ ಇದೇ ಗತಿಯಾಯಿತು. ಅನಂತರ ದಾವೀದನು ಎಲ್ಲಾ ಸೈನಿಕರೊಡನೆ ಯೆರೂಸಲೇಮಿಗೆ ಬಂದನು.
2 ಸಮುವೇಲನು 15
ಅಬ್ಷಾಲೋಮನ ಪಿತೂರಿ
1 ಸ್ವಲ್ಪ ಕಾಲವಾದನಂತರ ಅಬ್ಷಾಲೋಮನು ತನಗೋಸ್ಕರ ಒಂದು ರಥವನ್ನೂ ಕುದುರೆಗಳನ್ನೂ ತೆಗೆದುಕೊಂಡು ತನ್ನ ಮುಂದೆ ಮೈಗಾವಲಾಗಿ ಓಡುವದಕ್ಕೆ ಐವತ್ತು ಮಂದಿಯನ್ನು ನೇಮಿಸಿದನು.
2 ಅವನು ಹೊತ್ತಾರೆಯಲ್ಲೆದ್ದು ಊರುಬಾಗಲ ಬಳಿಯಲ್ಲಿ ನಿಂತುಕೊಳ್ಳುವನು. ಯಾವನಾದರೂ ತನ್ನ ವ್ಯಾಜ್ಯತೀರಿಸಿಕೊಳ್ಳುವದಕ್ಕಾಗಿ ಅರಸನ ಬಳಿಗೆ ಹೋಗುವದನ್ನು ಅಬ್ಷಾಲೋಮನು ಕಂಡರೆ ಅಂಥವನನ್ನು ತನ್ನ ಬಳಿಗೆ ಕರೆದು ನೀನು ಯಾವ ಊರಿನವನು ಎಂದು ಕೇಳುವನು. ಅವನು – ನಿನ್ನ ಸೇವಕನಾದ ನಾನು ಇಸ್ರಾಯೇಲ್ಯರ ಇಂಥ ಕುಲಕ್ಕೆ ಸೇರಿದವನು ಎಂದು ಉತ್ತರ ಕೊಡುವನು.
3 ಆಗ ಅಬ್ಷಾಲೋಮನು – ನೋಡು, ನಿನ್ನ ಕಾರ್ಯವು ಒಳ್ಳೇದೂ ನ್ಯಾಯವಾದದ್ದೂ ಆಗಿದೆ; ಆದರೆ ವ್ಯಾಜ್ಯಗಳನ್ನು ವಿಚಾರಿಸುವದಕ್ಕೆ ಅರಸನಿಂದ ಒಬ್ಬನೂ ನೇಮಕವಾಗಿಲ್ಲ.
4 ವ್ಯಾಜ್ಯವಾಗಲಿ ಬಿನ್ನಹವಾಗಲಿ ಉಳ್ಳವರು ಬಂದು ನ್ಯಾಯವನ್ನು ಪಡಕೊಳ್ಳುವ ಹಾಗೆ ನನ್ನನ್ನೇ ದೇಶದ ನ್ಯಾಯಾಧಿಪತಿಯನ್ನಾಗಿ ನೇಮಿಸಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು ಎಂದು ಹೇಳುವನು.
5 ಯಾವನಾದರೂ ಅವನಿಗೆ ಸಾಷ್ಟಾಂಗನಮಸ್ಕಾರ ಮಾಡುವದಕ್ಕೆ ಬಂದರೆ ಅವನು ಕೂಡಲೆ ಕೈಚಾಚಿ ಅವನನ್ನು ಹಿಡಿದು ಮುದ್ದಿಡುವನು.
6 ಅರಸನ ಬಳಿಗೆ ವ್ಯಾಜ್ಯಕ್ಕಾಗಿ ಬರುವ ಎಲ್ಲಾ ಇಸ್ರಾಯೇಲ್ಯರಿಗೆ ಅಬ್ಷಾಲೋಮನು ಹೀಗೆಯೇ ಮಾಡಿ ಎಲ್ಲರ ಮನಸ್ಸುಗಳನ್ನು ತನ್ನ ಕಡೆಗೆ ತಿರುಗಿಸಿಕೊಂಡನು.
7 ನಾಲ್ಕು ವರುಷಗಳಾದನಂತರ ಅಬ್ಷಾಲೋಮನು ಅರಸನಿಗೆ – ನಾನು ಯೆಹೋವನಿಗೆ ಹೊತ್ತ ಹರಕೆಗಳನ್ನು ಸಲ್ಲಿಸುವದಕ್ಕಾಗಿ ಹೆಬ್ರೋನಿಗೆ ಹೋಗಬೇಕಾಗಿದೆ, ಅಪ್ಪಣೆಯಾಗಲಿ.
8 ನಿನ್ನ ಸೇವಕನಾದ ನಾನು ಅರಾಮ್ದೇಶದ ಗೆಷೂರಿನಲ್ಲಿದ್ದಾಗ – ಯೆಹೋವನು ನನ್ನನ್ನು ತಿರಿಗಿ ಯೆರೂಸಲೇಮಿಗೆ ಬರಮಾಡುವದಾದರೆ ಆತನಿಗೆ ಒಂದು ವಿಶೇಷವಾದ ಆರಾಧನೆ ಮಾಡಿಸುವೆನೆಂದು ಹರಕೆಮಾಡಿದ್ದೆನು ಎಂದು ವಿಜ್ಞಾಪಿಸಲು
9 ಅರಸನು – ಹೋಗು, ನಿನಗೆ ಶುಭವಾಗಲಿ ಎಂದನು. ಅಬ್ಷಾಲೋಮನು ಹೆಬ್ರೋನಿಗೆ ಹೊರಟು ಹೋದನು.
10 ಅವನು ಗೂಢಚಾರರನ್ನು ಕಳುಹಿಸಿ ಇಸ್ರಾಯೇಲ್ಯರ ಎಲ್ಲಾ ಕುಲದವರಿಗೆ – ನೀವು ತುತೂರಿಯ ಧ್ವನಿಯನ್ನು ಕೇಳುತ್ತಲೆ ಅಬ್ಷಾಲೋಮನು ಹೆಬ್ರೋನಿನಲ್ಲಿ ಅರಸನಾದನೆಂದು ಆರ್ಭಟಿಸಿರಿ ಎಂದು ಹೇಳಿಸಿದ್ದನು.
11 ಅಬ್ಷಾಲೋಮನು ಯೆರೂಸಲೇಮಿನಿಂದ ಸಮಾರಾಧನೆಗೆಂದು ಇನ್ನೂರು ಜನರನ್ನು ಕರಕೊಂಡು ಹೋಗಿದ್ದನು. ಅವರು ಯಥಾರ್ಥ ಮನಸ್ಸಿನಿಂದ ಹೋದವರು; ಅವರಿಗೇನೂ ಗೊತ್ತಿರಲಿಲ್ಲ.
12 ಇದಲ್ಲದೆ ಅವನು ಸಮಾಧಾನಯಜ್ಞವನ್ನು ಮಾಡುತ್ತಿರುವಾಗ ದಾವೀದನ ಮಂತ್ರಿಯಾಗಿದ್ದ ಗೀಲೋವಿನ ಅಹೀತೋಫೆಲನೆಂಬವನನ್ನು ಅವನ ಊರಾದ ಗೀಲೋವಿನಿಂದ ಕರೇಕಳುಹಿಸಿದನು. ಜನರು ಅಬ್ಷಾಲೋಮನನ್ನು ಕೂಡಿಕೊಳ್ಳುತ್ತಾ ಬಂದದರಿಂದ ಒಳಸಂಚು ಬಲವಾಗುತ್ತಾ ಹೋಯಿತು.
ದಾವೀದನು ಓಡಿಹೋದದ್ದು
13 ಇಸ್ರಾಯೇಲ್ಯರ ಮನಸ್ಸು ಅಬ್ಷಾಲೋಮನ ಕಡೆಗೆ ತಿರುಗಿಕೊಂಡಿತೆಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ
14 ಅವನು ಯೆರೂಸಲೇಮಿನಲ್ಲಿದ್ದ ತನ್ನ ಸೇವಕರಿಗೆ – ಏಳಿರಿ, ಓಡಿ ಹೋಗೋಣ; ಇಲ್ಲೇ ಇದ್ದರೆ ನಾವು ಅಬ್ಷಾಲೋಮನ ಕೈಯಿಂದ ತಪ್ಪಿಸಿಕೊಳ್ಳಲಾರೆವು. ಬೇಗ ಹೊರಡೋಣ; ಅವನು ಅಕಸ್ಮಾತ್ತಾಗಿ ನಮ್ಮ ಮೇಲೆ ಬಿದ್ದು ನಮಗೆ ದುರ್ಗತಿಯನ್ನುಂಟುಮಾಡಿ ಪಟ್ಟಣದವರನ್ನೆಲ್ಲಾ ಕತ್ತಿಯಿಂದ ಸಂಹರಿಸಾನು ಎಂದು ಹೇಳಿದನು.
15 ಸೇವಕರು ಅರಸನಿಗೆ – ನಮ್ಮ ಒಡೆಯನಾದ ಅರಸನಿಗೆ ಸರಿತೋಚಿದ್ದನ್ನು ಮಾಡಸಿದ್ಧರಾಗಿದ್ದೇವೆ ಎಂದು ಉತ್ತರಕೊಟ್ಟರು.
16 ಆಗ ಅರಸನು ಮನೆಕಾಯುವದಕ್ಕಾಗಿ ಹತ್ತು ಮಂದಿ ಉಪ ಪತ್ನಿಯರನ್ನು ಬಿಟ್ಟು ಉಳಿದವರನ್ನೆಲ್ಲಾ ಕರಕೊಂಡು ಹೊರಟನು.
17 ಅರಸನೂ ಅವನ ಜೊತೆಯಲ್ಲಿ ಹೋದ ಜನರೆಲ್ಲರೂ ಪಟ್ಟಣದ ಕಡೇ ಮನೆಯ ಬಳಿಯಲ್ಲಿ ತುಸು ಹೊತ್ತು ನಿಂತರು.
18 ದಾವೀದನ ಎಲ್ಲಾ ಸೇವಕರೂ ಕೆರೇತ್ಯ, ಪೆಲೇತ್ಯ ಎಂಬ ಕಾವಲುದಂಡುಗಳೂ ಗತ್ಊರಿನಿಂದ ಅರಸನ ಜೊತೆಯಲ್ಲಿ ಬಂದಿದ್ದ ಆರುನೂರು ಮಂದಿ ಗಿತ್ತೀಯರೂ ಅರಸನ ಮುಂದೆ ಹೋದರು.
19 ಆಗ ಅರಸನು ಗಿತ್ತೀಯನಾದ ಇತ್ತೈ ಎಂಬವನಿಗೆ – ನೀನೂ ನಮ್ಮ ಸಂಗಡ ಯಾಕೆ ಬರಬೇಕು? ನೀನು ಸ್ವದೇಶವನ್ನು ಬಿಟ್ಟು ನನ್ನ ಆಶ್ರಯಕ್ಕೆ ಬಂದವನಲ್ಲವೇ. ಹಿಂದಿರುಗಿ ಹೋಗಿ ಅರಸನ ಬಳಿಯಲ್ಲಿ ವಾಸಮಾಡು.
20 ನಾನು ಎಲ್ಲೆಲ್ಲಿಯೋ ಅಲೆಯುತ್ತಿರಬೇಕಾಗುವದು; ಹೀಗಿರುವದರಿಂದ ನಿನ್ನೆ ಬಂದಂಥ ನಿನ್ನನ್ನು ಕರಕೊಂಡು ಹೋಗಿ ಸುಮ್ಮನೆ ಯಾಕೆ ತಿರುಗಾಡಲಿಕ್ಕೆ ಹಚ್ಚಬೇಕು? ನಿನ್ನ ಸಹೋದರರನ್ನು ಕರಕೊಂಡು ಹಿಂದಿರುಗಿಹೋಗು; ಕೃಪಾಸತ್ಯತೆಗಳು ನಿನ್ನ ಸಂಗಡ ಇರಲಿ ಎಂದು ಹೇಳಿದನು.
21 ಅದಕ್ಕೆ ಇತ್ತೈ – ಯೆಹೋವನಾಣೆ, ನನ್ನ ಒಡೆಯನಾದ ಅರಸನ ಜೀವದಾಣೆ, ಜೀವಹೋದರೂ ಉಳಿದರೂ ನನ್ನ ಒಡೆಯನಾದ ಅರಸನಿರುವಲ್ಲಿಗೆ ಹೋಗುವೆನು ಎಂದು ಉತ್ತರಕೊಟ್ಟನು.
22 ಆಗ ದಾವೀದನು ಅವನಿಗೆ – ಒಳ್ಳೇದು, ಮುಂದೆ ನಡೆ ಅಂದನು. ಗಿತ್ತೀಯನಾದ ಇತ್ತೈಯು ತನ್ನ ಎಲ್ಲಾ ಸೈನಿಕರನ್ನೂ ಪರಿಜನವನ್ನೂ ಕರಕೊಂಡು ಮುಂದೆ ನಡೆದನು.
23 ಇವರೆಲ್ಲರೂ ಮುಂದೆ ನಡೆಯುವಾಗ ಸುತ್ತಣವರೆಲ್ಲರೂ ಬಹಳವಾಗಿ ಅತ್ತರು. ಅರಸನೂ ಎಲ್ಲಾ ಜನರೂ ಕಿದ್ರೋನ್ಹಳ್ಳವನ್ನು ದಾಟಿ ಅರಣ್ಯಮಾರ್ಗ ಹಿಡಿದರು.
24 ಚಾದೋಕನೂ ಅವನ ವಶದಲ್ಲಿದ್ದ ಎಲ್ಲಾ ಲೇವಿಯರೂ ದೇವರ ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಬಂದು ಅದನ್ನು ಜನರೆಲ್ಲರೂ ದಾಟಿಹೋಗುವವರೆಗೆ ಕೆಳಗಿಳಿಸಿದ್ದರು. ಎಬ್ಯಾತಾರನೂ ಬಂದಿದ್ದನು.
25 ಅರಸನು ಚಾದೋಕನಿಗೆ – ನೀನು ದೇವರ ಒಡಂಬಡಿಕೆಯ ಮಂಜೂಷವನ್ನು ಹಿಂದಿರುಗಿ ತೆಗೆದುಕೊಂಡು ಹೋಗು; ಯೆಹೋವನ ದೃಷ್ಟಿಯಲ್ಲಿ ನನಗೆ ದಯೆದೊರಕಿದರೆ ನಾನು ಆತನನ್ನೂ ಆತನ ಆಲಯವನ್ನೂ ನೋಡುವ ಹಾಗೆ ತಾನೇ ನನ್ನನ್ನು ಹಿಂದಕ್ಕೆ ಬರಮಾಡುವನು.
26 ಆತನು – ನಿನ್ನಲ್ಲಿ ನನಗೆ ಇಷ್ಟವಿಲ್ಲವೆಂದು ತೋರಿಸಿದರೆ ತನಗೆ ಸರಿಕಂಡಂತೆ ಮಾಡಲಿ, ಆತನ ಚಿತ್ತ ಅಂದನು.
27 ಇದಲ್ಲದೆ ಅವನು ಯಾಜಕನಾದ ಚಾದೋಕನಿಗೆ – ನೀನು ದೇವದರ್ಶಿ; ನೀನು ನಿನ್ನ ಮಗನಾದ ಅಹೀಮಾಚನು, ಎಬ್ಯಾತಾರನ ಮಗನಾದ ಯೋನಾತಾನನು ಎಂಬ ಈ ಇಬ್ಬರು ಹುಡುಗರನ್ನು ಕರಕೊಂಡು ಸುರಕ್ಷಿತವಾಗಿ ಪಟ್ಟಣಕ್ಕೆ ಹೋಗಬೇಕು.
28 ನಿಮ್ಮಿಂದ ವರ್ತಮಾನಬರುವ ತನಕ ನಾನು ಅಡವಿಯಲ್ಲಿ ಹೊಳೆದಾಟುವ ಸ್ಥಳದ ಹತ್ತಿರ ಇರುವೆನು ಎಂದು ಹೇಳಿದನು.
29 ಆಗ ಚಾದೋಕನೂ ಎಬ್ಯಾತಾರನೂ ದೇವರ ಮಂಜೂಷವನ್ನು ಯೆರೂಸಲೇಮಿಗೆ ಒಯ್ದು ಅಲ್ಲೇ ವಾಸಿಸಿದರು.
30 ದಾವೀದನು ಮೋರೆಯನ್ನು ಮುಚ್ಚಿಕೊಂಡು ಅಳುತ್ತಾ ಬರಿಗಾಲಿನಿಂದ ಎಣ್ಣೇಮರಗಳ ಗುಡ್ಡವನ್ನೇರಿದನು. ಅವನ ಜೊತೆಯಲ್ಲಿದ್ದ ಜನರೂ ಮೋರೆಮುಚ್ಚಿಕೊಂಡು ಅಳುತ್ತಾ ಏರಿದರು.
31 ಅಬ್ಷಾಲೋಮನ ಸಂಗಡ ಒಳಸಂಚುಮಾಡಿದವರಲ್ಲಿ ಅಹೀತೋಫೆಲನೂ ಇದ್ದಾನೆಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ ಅವನು – ಯೆಹೋವನೇ, ಅಹೀತೋಫೆಲನ ಆಲೋಚನೆಗಳನ್ನು ನಿರರ್ಥಕಪಡಿಸು ಎಂದು ಪ್ರಾರ್ಥಿಸಿದನು.
32 ಅವನು ಗುಡ್ಡದ ತುದಿಯಲ್ಲಿ ದೇವಾರಾಧನೆ ನಡೆಯುವ ಸ್ಥಳಕ್ಕೆ ಬಂದಾಗ ಅರ್ಕೀಯನಾದ ಹೂಷೈ ಎಂಬವನು ಅಂಗಿಯನ್ನು ಹರಕೊಂಡು ತಲೆಯ ಮೇಲೆ ಮಣ್ಣುಹಾಕಿಕೊಂಡು ಅರಸನ ಬಳಿಗೆ ಬಂದನು.
33 ಅರಸನು ಅವನಿಗೆ – ನೀನು ನನ್ನ ಸಂಗಡ ಬರುವದಾದರೆ ನನಗೆ ಭಾರವಾಗುವಿಯಷ್ಟೆ.
34 ಆದರೆ ನೀನು ಹಿಂದಿರುಗಿ ಪಟ್ಟಣಕ್ಕೆ ಹೋಗಿ ಅಬ್ಷಾಲೋಮನಿಗೆ – ಅರಸನೇ, ನಾನು ನಿನ್ನ ಸೇವಕನು; ಮುಂಚೆ ನಿನ್ನ ತಂದೆಯನ್ನು ಸೇವಿಸಿದಂತೆ ಈಗ ನಿನ್ನನ್ನು ಸೇವಿಸುತ್ತೇನೆ ಎಂದು ಹೇಳುವದಾದರೆ ನನಗೋಸ್ಕರ ಅಹೀತೋಫೆಲನ ಆಲೋಚನೆಯನ್ನು ವ್ಯರ್ಥಮಾಡುವದಕ್ಕೆ ನಿನಗೆ ಅನುಕೂಲವಾಗುವದು.
35 ಅಲ್ಲಿ ನಿನ್ನ ಸಂಗಡ ಯಾಜಕರಾದ ಚಾದೋಕ್ ಎಬ್ಯಾತಾರರು ಇರುತ್ತಾರಲ್ಲಾ; ಅರಮನೆಯಲ್ಲಿ ನಿನಗೆ ಗೊತ್ತಾಗುವ ವರ್ತಮಾನವನ್ನೆಲ್ಲಾ ಆ ಇಬ್ಬರು ಯಾಜಕರಿಗೆ ತಿಳಿಸು.
36 ಅವರ ಬಳಿಯಲ್ಲಿ ಇಬ್ಬರು ಹುಡುಗರಿದ್ದಾರೆ; ಒಬ್ಬನು ಚಾದೋಕನ ಮಗನಾದ ಅಹೀಮಾಚನು; ಇನ್ನೊಬ್ಬನು ಎಬ್ಯಾತಾರನ ಮಗನಾದ ಯೋನಾತಾನನು. ಇವರ ಮುಖಾಂತರವಾಗಿ ನೀನು ಎಲ್ಲಾ ವರ್ತಮಾನವನ್ನು ನನಗೆ ಮುಟ್ಟಿಸಬಹುದು ಎಂದು ಹೇಳಿ ಅವನನ್ನು ಕಳುಹಿಸಿದನು.
37 ಅಬ್ಷಾಲೋಮನು ಯೆರೂಸಲೇಮನ್ನು ಪ್ರವೇಶಿಸುವಷ್ಟರಲ್ಲೇ ದಾವೀದನ ಸ್ನೇಹಿತನಾದ ಹೂಷೈಯು ಪಟ್ಟಣಕ್ಕೆ ಬಂದನು.